ಆಗ ಕತ್ತಲಾಗಿತ್ತು - ಒಂದು ಅನುವಾದಿತ ಕವಿತೆ

*ಆಗ ಕತ್ತಲಾಗಿತ್ತು* 

          1
ಯೂದ
ಎದ್ದು ಹೋದಾಗ
ಕತ್ತಲಾಗಿತ್ತು !

ಪ್ರಭುವಿನ ಎದೆಯಂಗಳದಲ್ಲೀಗ
ಹುಣ್ಣಿಮೆ

        2
ಯೂದ
ಬಿಟ್ಟುಹೋದ ದ್ರಾಕ್ಷಾರಸವನ್ನು
ಯೇಸು ಕುಡಿದು ಬಿಟ್ಟರು

ಅದಕ್ಕೋ ಏನೋ
ಯೂದನ ಮುತ್ತು
'ದ್ರೋಹ' ಎಂದೆನ್ನಿಸಲೇ ಇಲ್ಲ!

          3
ಸಿಪಾಯಿಗಳೊಂದಿಗೆ
ಯೂದ ಬಂದಾಗ
ತೋಳಗಳ ಗುಂಪಿನಲ್ಲಿ ಸಿಕ್ಕಿಕೊಂಡ 'ಕುರಿಮರಿ'ಯಂತೆಯೇ ಕಾಣುತ್ತಿದ್ದ...

ಕುರಿಗಾಹಿ ಪ್ರಭು ಯೇಸು
ಮನ ಮರುಗಿದರು!

         4
ಯೂದ ಮುತ್ತಿನ ಮೂಲಕ
"ದೇವರ ಕುರಿಮರಿ ಇದೇ" ಎಂದು ತೋರಿಸಿದ...

ಬಲಿಪೀಠ
ಕುರಿಮರಿಯ ನೆತ್ತರಿಗಾಗಿ
ಹಪಹಪಿಸುತ್ತಿತ್ತು!

         5
ಕುರಿಮರಿಯೇ
ಕುರಿಗಾಹಿಯನ್ನು
ಪರಾಧೀನಪಡಿಸಿದಾಗ
ಕುರಿಮಂದೆಯ ಗತಿ !?

ಪ್ರಭು ಯೇಸು
ಮುಂದಿನದ್ದು ಚಿಂತಿಸಿ
ರಕ್ತದ ಬೆವರು ಹರಿಸಿದರು!

        6
ಯೂದನ ತುಟಿಗಳು
ಪವಿತ್ರವಾದ ಪ್ರಭುವಿನ  ಕೆನ್ನೆಯನ್ನು ಸ್ಪರ್ಶಿಸಿದಾಗ
ಮಾರುತ್ತರವಿಲ್ಲದೆ
ಪ್ರಭು ಬೋಧಿಸಿದ ಪಾಠ-
ಪ್ರೀತಿ ಒಂದು ' ಆಯ್ಕೆ ' !

       7
ಒಬ್ಬರನ್ನೊಬ್ಬರು 
ಆಲಂಗಿಸಿದಾಗ
ಇಬ್ಬರೂ ಸಮಾನವಾಗಿ ಬೆವೆತಿದ್ದರು!

ಹೃದಯದಲ್ಲಿ ಇಬ್ಬರಿಗೂ
ಹರಿತವಾದ ಗಾಯ !


ಕೊಂಕಣಿ ಮೂಲ:
ಜೊ.ಸಿ.ಸಿದ್ದಕಟ್ಟೆ ಕಾರ್ಮೆಲಿತ್
ಕನ್ನಡಕ್ಕೆ : ಜಾನ್ ಸುಂಟಿಕೊಪ್ಪ

Comments

Post a Comment

Popular posts from this blog

ಏನೂ ಅಲ್ಲದವನಾಗುವುದೆಂದರೆ ..

***** ಕವಿತೆಯಾಗುವುದೆಂದರೇನು!?*****

ಪ್ರಾಣ