*** ತರ್ಪಣ ***

ಅಲ್ಲೊಂದು ಹಕ್ಕಿ ಕೂಗುತ್ತಿದೆ
ಹಡ್ಲುಬಿದ್ದ ಗದ್ದೆ
ಸೋಮಾರಿತನ ಹೊದ್ದು ಮಲಗಿದೆ;
ಏರಿ ಬದಿಯ ನಳ್ಳಿ ಬಿಲಗಳು
ವಸಾಹತು ಕಳಕೊಂಡಾಗಿದೆ
ಆ ಬಿಲದಗಲಕ್ಕೂ
ಹಕ್ಕಿ ಹಾಡಿನ ಮಾರ್ದನಿ-
ಒಂಟಿ ರಾಗವ ಕೇಳುವವರಿಲ್ಲ
ಹರಿವ ತೋಡಿನ ಪರಾಕ್ರಮವಿಲ್ಲ
ಗಾಳಿಗೆ ಓಲಾಡುವ ಕೆಸುಗಳಷ್ಟೇ
ಕೂಮೆ,ಬೈನೆ,ತಡಚಿಲಗಳೆಲ್ಲಾ
ಮರೆತು ಹೋಗಿವೆ,,,
ಅಂದಚೆಂದದ ಮೂಲಿಕೆಗಳಿಗೆಲ್ಲಾ
ನೀಟಾದ ಕ್ಷೌರ!
ಶಿಸ್ತಿನ ಸಾಲಲ್ಲಿ ನಿಂತ ಸಿಲ್ವರ್ ಮರಗಳು
ಕಾಂಡದ ತಿರುಳಲ್ಲಿ ನೋಟನ್ನು
ಹುದುಗಿಸುತ್ತಿವೆ,,.
ರೊಚ್ಚಿಗೆದ್ದು ಪೊಗದಸ್ತಾಗಿ
ಬೆಳೆವ ಕಾಫಿಗಿಡಗಳು
ಕಾಡಿನ ನಾಶದ ಪಣತೊಟ್ಟಿವೆ
ತೊಯ್ದಾಡುವ ಅಂತರಾಷ್ಟ್ರೀಯ ಮಾರುಕಟ್ಟೆ
ಸುರಿವ ಎನ್.ಪಿ.ಕೆ.ಗಳ ಹೆಚ್ಚಿಸಿವೆ
ದಟ್ಟವಾದ ಕಾಫಿತೋಟಗಳಲೂ
ಗವ್ವೆನ್ನುವ ಮೌನ!
ಕೃತಕ ಹಸಿರಿನ ಸಾಮ್ರಾಜ್ಯದಲಿ
ಬರೇ ಹಣದ ಧ್ಯಾನ,,


ಮೌನ ಹೊದ್ದ ನೆಲವೇ
ಒಮ್ಮೆ ಮೈ ಕೊಡವಿ ನಿಲ್ಲು
ಹುಚ್ಚು ಮನುಜನ ಸತ್ತ ನೋಟುಗಳ
ಕಲಸಿ ಭೂಗತಗೊಳಿಸು,,,
ಭೂಮಿ ಭೂಕಂಪನಕೆ
ಉತ್ತು ಹದವಾಗಲಿ
ಅಲ್ಲೆಲ್ಲೂ ಮನುಷ್ಯನ ಹೆಜ್ಜೆಗುರುತುಗಳು
ಕಾಣದಾಗಲಿ,,,
ಚಿಗುರುವ ಹಸಿರು
ನೆಮ್ಮದಿಯ ಉಸಿರು ಚೆಲ್ಲಲಿ,,,
- ಜಾನ್ ಸುಂಟಿಕೊಪ್ಪ.

Comments

Popular posts from this blog

***** ಮತ್ತೆ ಮತ್ತೆ ಸಮ್ಮಿಲನ *****

ಹೀಗೊಂದು ಹತ್ಯೆ

ತಪ್ಪಾಯಿತು ..